
ಹಾಸನ (22.02.2021) : ಐಎಂಎ ಹಗರಣದಲ್ಲಿ ನನ್ನ ಪಾತ್ರವಿಲ್ಲ ಎಂದು ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಕೆ. ಕುಮಾರಸ್ವಾಮಿ ಅವರ ಪುತ್ರನ ವಿವಾಹ ಸಮಾರಂಭದಲ್ಲಿ ಭಾನುವಾರ ಭಾಗವಹಿಸಿ, ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಶಾಸಕರೊಬ್ಬರು ಇಫ್ತಿಯಾರ್ ಊಟಕ್ಕೆ ಕರೆದುಕೊಂಡು ಹೋಗಿದ್ದ ವೇಳೆ ಆ ಕಚೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರ ಹಾಕಿದ್ದರು. ಅಲ್ಲಿದ್ದ ಇಬ್ಬರು ವ್ಯಕ್ತಿಗಳು ಯಾರು ಎಂದು ಗೊತ್ತಿರಲಿಲ್ಲ. ದೇಶದಲ್ಲಿ ಅತಿ ಹೆಚ್ಚಿನ ಆದಾಯ ತೆರಿಗೆ ಪಾವತಿಸಿರುವ ಸಂಸ್ಥೆ ಎಂದು ನರೇಂದ್ರ ಮೋದಿ ಪ್ರಮಾಣ ಪತ್ರ ನೀಡಿದ್ದಾರೆ ಅಂತ ಅಲ್ಲಿದ್ದ ವ್ಯಕ್ತಿಯನ್ನು ನನಗೆ ಪರಿಚಯಿಸಿದ್ದರು. ಸಿಸಿಬಿ ತನಿಖೆ ನಡೆದಿದೆ. ಸಿಬಿಐ ತನಿಖೆಯೂ ನಡೆಯುತ್ತಿದೆ ಎಂದು ತಿಳಿಸಿದರು.
ಇನ್ನು ಮೀಸಲಾತಿ ಸಂಬಂಧ ಮಾತನಾಡಿದ ಅವರು, ಜನಗಣತಿ ವರದಿ ಆಧರಿಸಿ ಮೀಸಲಾತಿ ನೀಡಬೇಕೆಂಬ ಮಾತು ಕೇಳಿ ಬಂದಿದೆ. ಈ ಹೋರಾಟ ಸಮಾಜದಲ್ಲಿ ಸಂಘರ್ಷಗಳಿಗೆ ಎಡೆ ಮಾಡಿಕೊಡದೆ ಪ್ರತಿಯೊಂದು ಸಮಾಜದ ಕಡುಬಡವರ ಪರಿಸ್ಥಿತಿ ಆಧಾರದ ಮೇಲೆ ರಾಜಕೀಯ ಬೆರಸದೆ ಅರ್ಹರಿಗೆ ಮೀಸಲಾತಿ ಸದುಪಯೋಗ ಆಗಬೇಕು ಎಂದು ಹೇಳಿದರು.