
“ಬಿಹಾರದ ನನ್ನ ಹಳ್ಳಿಯಲ್ಲಿರುವ ಅಸ್ಪೃಶ್ಯತೆಗಿಂತ ನಮ್ಮ ಶಿಕ್ಷಣ ಸಂಸ್ಥೆಗಳಲ್ಲಿರುವ ಅಸ್ಪೃಶ್ಯತೆ ಭೀಕರವಾಗಿದೆ”, ಇದು ಗುಜರಾತಿನ ಗಾಂಧಿನಗರದಲ್ಲಿರುವ IITಯ ವಿದ್ಯಾರ್ಥಿ ರಾಹುಲ್ ಕುಮಾರ್ ಮಾತು. ವಾಸ್ತವದಲ್ಲಿ ಇಂದಿಗೂ ಜೀವಂತವಾಗಿರುವ ಅಸ್ಪೃಶ್ಯತೆಯನ್ನು ಕೆಳಸಮುದಾಯದ ಬಹಳಷ್ಟು ವಿದ್ಯಾರ್ಥಿಗಳು ಅನುಭವಿಸುತ್ತಿರುವುದು ಕಟು ಸತ್ಯ.
ಅಸ್ಪೃಶ್ಯತೆಯು ಸಂಪೂರ್ಣವಾಗಿ ಮಾಯವಾಗಿದೆ, ಇದ್ದರೂ ಎಲ್ಲೋ ಒಂದಿಷ್ಟು ಕುಗ್ರಾಮಗಳಲ್ಲಿ ಇರಬಹುದು ಎಂದು ಕೆಲವರು ಹಾರಿಕೆಯಿಂದ ಹೇಳುವುದನ್ನು ಅನೇಕ ಬಾರಿ ಕೇಳಿದ್ದೇವೆ. ಹಳ್ಳಿಗಳಲ್ಲಿನ ಜನರು ಅನಕ್ಷರಸ್ಥರು ಹಾಗು ಅನಾಗರಿಕರು ಹಾಗಾಗಿ ಅಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತವಾಗಿದೆ, ಆದರೆ ನಗರ ಪ್ರದೇಶಗಳಲ್ಲಿ ವಿದ್ಯಾವಂತರ ಸಂಖ್ಯೆ ಹೆಚ್ಚು, ಜೊತೆಗೆ ಇಲ್ಲಿ ಹೆಚ್ಚು ನಾಗರೀಕತೆ ಬೆಳದಿರುವುದರಿಂದ ಇಲ್ಲಿ ಅಸ್ಪೃಶ್ಯತೆ ಇಲ್ಲ ಎನ್ನುವ ಭ್ರಮೆಯಲ್ಲಿ ನಮ್ಮ ಸಮಾಜ ಇರುವುದನ್ನು ಕಾಣಬಹುದು. ವಾಸ್ತವವಾಗಿ ಅಸ್ಪೃಶ್ಯತೆ ಹೆಚ್ಚು ಜೀವಂತವಾಗಿರುವುದು So-called ವಿದ್ಯಾವಂತರು ಮತ್ತು ನಾಗರೀಕರು ಎನಿಸಿಕೊಂಡಿರುವವರ ಪೈಕಿಯೆ!
ಪ್ರತಿ ಶಿಕ್ಷಣ ಸಂಸ್ಥೆಗಳಲ್ಲೂ SC/ST ಸಮುದಾಯದ ವಿದ್ಯಾರ್ಥಿಗಳು ಒಂದಲ್ಲಾ ಒಂದು ರೀತಿಯ ಸಮಸ್ಯೆಗಳನ್ನು ಪ್ರತಿದಿನ ಎದುರಿಸಿ ಅದರ ನಡುವೆಯೇ ಬದುಕಬೇಕಾಗಿದೆ. ಅದು ಕೇವಲ ಹಳ್ಳಿಗಾಡಿನ ಪ್ರಾಥಮಿಕ ಶಾಲೆಗಳು ಅಥವಾ ಪಟ್ಟಣಗಳಲ್ಲಿನ ಕಾಲೇಜುಗಳಲ್ಲಿ ಮಾತ್ರವಲ್ಲ, ದೇಶದ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಗಳಾದ IIT, IIM, IISC, IITS, NIT, AIIMS, JNU ಹಾಗೂ ಮುಂತಾದ ಸಂಸ್ಥೆಗಳಲ್ಲೂ ಅಸ್ಪೃಶ್ಯತೆ ಇಂದಿಗೂ ಜೀವಂತವಾಗಿದೆ. ಇಲ್ಲಿ ದಲಿತ ಮತ್ತು ಹಿಂದುಳಿದ ವರ್ಗಗಳು ಒಳ ಬರದಂತೆ Gate keepers ಆಗಿ ಕೆಲಸ ಮಾಡುತ್ತಿರುವುದು ಅಲ್ಲಿ ನೇಮಕವಾಗಿರುವ ಕುಲಪತಿಗಳು, ನಿರ್ದೇಶಕರು, ಡೀನ್ ಗಳು ಹಾಗು ಬೋಧಕೇತರ ವರ್ಗದವರು.
ಇತ್ತೀಚೆಗೆ ಕೇಂದ್ರ ಶಿಕ್ಷಣ ಸಚಿವರಾದ ರಮೇಶ್ ಪೋಕ್ರಿಯಾಲ್ ನಿಶಾಂಕ್ ರವರು ರಾಜ್ಯಸಭೆಯಲ್ಲಿ ಪ್ರಶ್ನೆಗೆ ಉತ್ತರಿಸುತ್ತ ಬೆಂಗಳೂರಿನ IISC ಯಲ್ಲಿ 2016-20 ರ PhD ಪದವಿಗಾಗಿ ದಾಖಲಾಗಿರುವ ವಿದ್ಯಾರ್ಥಿಗಳ ಪೈಕಿ ಕೇವಲ
2.1%- ST, 9%-SC, 8%- OBC ವಿದ್ಯಾರ್ಥಿಗಳಾಗಿದ್ದಾರೆ! ಹಾಗೆಯೇ Integrated PhD ಪದವಿಗೆ SC- 9%, ST -1.5% ಹಾಗು OBC- 5% ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ದೇಶದ 17 Indian Institutes of Information Technology (IIIT) ಗಳಲ್ಲಿ PhD ಗಾಗಿ ದಾಖಲಾಗಿರುವ ವಿದ್ಯಾರ್ಥಿಗಳ ಪೈಕಿ ಕೇವಲ 1.7%- ST, 9% – SC ಹಾಗು 27.4% – OBC ಗಳಿದ್ದಾರೆ.
ಒಂದೆಡೆ ವಿದ್ಯಾರ್ಥಿಗಳ ಪಾಡು ಇದಾದರೆ ಇನ್ನೂ ಉದ್ಯೋಗದ ವಿಷಯಕ್ಕೆ ಬಂದರೆ ದೇಶದ 23 IIT ಗಳಲ್ಲಿನ 6043 ಹುದ್ದೆಗಳ ಪೈಕಿ ಕೇವಲ 149-SC , 21- ST ಅಂದರೆ ಕೇವಲ 3%. ಅಷ್ಟು ಮಾತ್ರ ಇವರಿಗೆ ಪ್ರಾತಿನಿಧ್ಯ ಸಿಕ್ಕಿದೆ. ಹಾಗೆಯೇ ಬಹುತೇಕ IIT ಗಳಲ್ಲಿ SC/ST ಗಳ ಪ್ರಾತಿನಿಧ್ಯವೆ ಇಲ್ಲದಂತಾಗಿದೆ! ಇದರ ಜೊತೆಗೆ ಎಲ್ಲವನ್ನೂ ಎದುರಿಸಿ ಈ ಸಂಸ್ಥೆಗಳಿಗೆ ಪ್ರವೇಶವನ್ನು ಪಡೆದರೆ ತದನಂತರದಲ್ಲಿ ಅವರು ನೀಡುವ ಕಿರುಕುಳಕ್ಕೆ ವಿದ್ಯಾರ್ಥಿಗಳು ಕೆಲವರು ತಮ್ಮ ಶಿಕ್ಷಣವನ್ನು ಮಧ್ಯದಲ್ಲಿಯೇ ಬಿಟ್ಟು ಹೊರಬರುವ ಪರಿಸ್ಥಿತಿ ಇದೆ. ಮಾನ್ಯ ಶಿಕ್ಷಣ ಮಂತ್ರಿಗಳೆ 2019 ರಲ್ಲಿ ಸಂಸತ್ತಿನಲ್ಲಿ ನೀಡಿರುವ ಅಂಕಿ ಅಂಶಗಳ ಪ್ರಕಾರ IIT ಗಳಿಂದ Drop out ಆಗುವ ವಿದ್ಯಾರ್ಥಿಗಳ ಪೈಕಿ 48% ಹಾಗು IIM ಗಳಿಂದ drop out ಆಗುವ ವಿದ್ಯಾರ್ಥಿಗಳ ಪೈಕಿ 62.6% SC/ST ಹಾಗು OBC ವಿದ್ಯಾರ್ಥಿಗಳೇ ಆಗಿದ್ದಾರೆ. ಆಶ್ಚರ್ಯವೇನೆಂದರೆ ಈ ಸಂಸ್ಥೆಗಳನ್ನು ಹಾಗು ಇಲ್ಲಿನ ಪ್ರೊಫೆಸರ್ ಗಳನ್ನು ದೇಶದ ಅತಿ ಬುದ್ದಿವಂತ ವರ್ಗವೆಂದು ಪರಿಗಣಿಸಲಾಗುತ್ತದೆ. ಆದರೆ ಅವರು ಮಾನಸಿಕವಾಗಿ ಜಾತೀಯತೆ ತುಂಬಿಕೊಂಡಿರುವ ರೋಗಗ್ರಸ್ಥರು ಎಂಬುದನ್ನು ಯಾರು ಪರಿಗಣಿಸುತ್ತಿಲ್ಲ!
ನಮ್ಮ ಶಿಕ್ಷಣ ವ್ಯವಸ್ಥೆಯು ಇಷ್ಟು ರೋಗಗ್ರಸ್ತವಾಗಿದ್ದರೂ ನಮ್ಮ ಸರ್ಕಾರಗಳಾಗಲಿ ನಮ್ಮನ್ನಾಳುವ ರಾಜಕಾರಣಿಗಳಾಗಲಿ ಇದರ ಬಗ್ಗೆ ತಲೆ ಕೆಡಸಿಕೊಳ್ಳುತ್ತಿಲ್ಲ! ಕನಿಷ್ಠ ಮಾಧ್ಯಮದವರಾದರು ಇಂತಹ ಅನ್ಯಾಯವನ್ನು ಬಿತ್ತರಿಸಿ ವ್ಯವಸ್ಥೆಯನ್ನು ಸರಿಪಡಿಸುವ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾರೆಯೆ ಎಂದರೆ ದುರದೃಷ್ಟವಶಾತ್ ಇವರೂ ಸಹ ಇಂತಹುದೇ ಜಾತಿ ರೋಗದ ಸೋಂಕಿನಿಂದ ಬಳಲುತ್ತಿದ್ದಾರೆ. ವಿಪರ್ಯಾಸವೆಂದರೆ ಇಲ್ಲಿ ರೋಗಿಷ್ಟರು ಎಲ್ಲವನ್ನೂ ಅನುಭವಿಸುತ್ತ ಸುಖವಾಗಿ ವೈಭೋಗದ ಜೀವನ ನಡೆಸುತಿದ್ದರೆ, ಉಳಿದವರು ಎಲ್ಲವನ್ನೂ ಕಳೆದುಕೊಂಡು, ಅವಕಾಶಗಳಿಂದ ವಂಚಿತರಾಗಿ ಬದುಕಲು ಪ್ರತಿನಿತ್ಯ ಹೋರಾಟ ಮಾಡಬೇಕಿದೆ. ವ್ಯವಸ್ಥೆಯೊಳಗಿನ ಇಂತಹ ಅವ್ಯವಸ್ಥೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಮುಂದಿನ ಪೀಳಿಗೆ ಯಾವ ಹೆಜ್ಜೆ ಇಡಬೇಕೆಂಬುದೇ ಗಂಭೀರವಾದ ವಿಷಯ.
-ಪ್ರೊಫೆಸರ್ ಹರಿರಾಮ್.ಎ